ಯಾದಗಿರಿ: ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಪ್ರವೇಶ ಮಾಡುವ ಅಗತ್ಯ ಇಂದಿನ ದಿನಗಳಲ್ಲಿ ಹೆಚ್ಚಿದೆ ಎಂದು ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲನಗೌಡ ಪಾಟೀಲ್ ಹತ್ತಿಕುಣಿ ತಿಳಿಸಿದರು.
ಇಲ್ಲಿನ ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ್ ಅವರ ಜನಸಂಪರ್ಕ ಕಾರ್ಯಾಲಯದಲ್ಲಿ ಶನಿವಾರ ರಾಜ್ಯ ಬಿಜೆಪಿ ಕಾರ್ಯಕಾರಿಣಿಯ ನೂತನ ಸದಸ್ಯರಾದ ಮಹೇಶರಡ್ಡಿ ಮುದ್ನಾಳ್ ಅವರನ್ನು ಹತ್ತಿಕುಣಿ ಬಿಜೆಪಿ ಹೋಬಳಿ ನಾಯಕರು ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ದೇಶದಲ್ಲಿ ಯುವಶಕ್ತಿ ಬಲಿಷ್ಠವಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ ಎಂದರು.
ಮಹೇಶರಡ್ಡಿ ಉತ್ತಮ ಸಂಘಟಕರಾಗಿದ್ದು, ಪಕ್ಷದ ಚಟುವಟಿಕೆಗಳಲ್ಲಿ ಸದಾ ಸಕ್ರೀಯರಾಗಿದ್ದಾರೆ. ಅವರ ತಾತಾ ವಿಶ್ವನಾಥರಡ್ಡಿ ಮುದ್ನಾಳ್ ಒಬ್ಬ ಸ್ವಾತಂತ್ರ್ಯ ಸೇನಾನಿಯಾಗಿದ್ದರು. ತಂದೆ ಹಾಗೂ ದೊಡ್ಡಪ್ಪ ಶಾಸಕರಾಗಿ ಯಾದಗಿರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹೀಗಾಗಿ ಮಹೇಶರಡ್ಡಿ ಅವರಿಗೆ ರಾಜಕೀಯದ ಅನುಭವವಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹೇಶರಡ್ಡಿ ಮುದ್ನಾಳ್, ಪಕ್ಷದ ಕಾರ್ಯಕರ್ತರ ಮತ್ತು ಮುಖಂಡರ ಸಲಹೆ ಮತ್ತು ಮಾರ್ಗದರ್ಶನ ಪಡೆದು ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದರು.
ಪ್ರಮುಖರಾದ ಖಂಡಪ್ಪ ದಾಸನ್, ಶರಣಗೌಡ ಬಾಡಿಯಾಳ, ರಾಮರಡ್ಡಿ ಮೂಲಿಮನಿ, ಸ್ವಾಮಿದೇವ ದಾಸನಕೇರಿ,
ದೇವೀಂದ್ರಪ್ಪ ಖಂಡಪನೂರ್, ಹೀರಾಸಿಂಗ್ ಪವಾರ್, ಶರಣಪ್ಪ ಬಾರನೂರ, ತಿಮ್ಮಣ್ಣ ಇದ್ಲಿ, ಮಲ್ಲಿಕಾರ್ಜುನ ಗೌಡಗೇರಾ, ಸಾಹೇಬಗೌಡ ಪಾಟೀಲ್, ಶರಣಗೌಡ ಪಾಟೀಲ್, ಮಲ್ಲು ಗೌಡಗೇರಾ, ಮಲ್ಲಿ ಬೂದರು, ಸೋಮರಾಯ ಬಾಚವಾರ, ಮಲ್ಲಿಕಾರ್ಜುನ ಸಂಗಪ್ಪನೂರ, ಹಣಮಂತ ಪೂಜಾರಿ, ಸೋಮು ಪೂಜಾರಿ, ಶೇಖರ ಹೊಸಳ್ಳಿ, ಕಮಲಿಬಾಯಿ ಸೌದಾಗರ, ಗೋಪಾಲ ರಾಮುನಾಯಕ ತಾಂಡಾ, ಈಶ್ವರ ಬಾಚವಾರ ಇದ್ದರು.

