ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಮಂಗಳ ಗೌರಿಯಾಗಿ ಅಭಿನಯಿಸುತ್ತಿರುವ ಕಾವ್ಯಶ್ರೀ ನಟನಾ ಪಯಣದಲ್ಲಿ ಯಶಸ್ಸು ಸಾಧಿಸಿದ್ದಾರೆ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದಿರುವ ಕಾವ್ಯಶ್ರೀ ಕಿರುತೆರೆ ವೀಕ್ಷಕರ ಪಾಲಿನ ಮಂಗಳ ಗೌರಿ.

ಇಂತಿಪ್ಪ ಕಾವ್ಯ ತಮ್ಮ ಕೆರಿಯರ್ ಆರಂಭಿಸಿದ್ದು ಜರ್ನಲಿಸ್ಟ್ ವೃತ್ತಿ ಮೂಲಕ. ತಮ್ಮ ಕೆರಿಯರ್ ನ ಆರಂಭದ ದಿನಗಳಲ್ಲಿ ಸ್ಥಳೀಯ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ಆ ಸಮಯದಲ್ಲಿ ಆಕೆ ಹಲವು ಆಡಿಷನ್ ಗಳಲ್ಲಿ ಭಾಗವಹಿಸಿದ್ದರು.


ಕಾವ್ಯಶ್ರೀ ಜರ್ನಲಿಸ್ಟ್ ದಿನಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ನಿರೂಪಕರಾಗಿ ಶೋ ನಿರೂಪಣೆ ಮಾಡುತ್ತಿದ್ದಾರೆ. “ಹಳೆ ದಿನಗಳು, ನೆನಪುಗಳು, ತುಂಬಾ ಇಷ್ಟದ ಕೆಲಸ ಇದು. ನಾನು ಮತ್ತೊಮ್ಮೆ ಜರ್ನಲಿಸ್ಟ್ ಆಗಲು ಇಷ್ಟಪಡುತ್ತೇನೆ” ಎಂದು ಬರೆದುಕೊಂಡಿದ್ದಾರೆ.


ಪತ್ರಕರ್ತೆ ವೃತ್ತಿ ಮಾಡುತ್ತಿದ್ದ ಕಾವ್ಯಶ್ರೀ ಮಂಗಳ ಗೌರಿ ಮದುವೆ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದರು. ಮಂಗಳ ಗೌರಿ ಆಗಿ ವೀಕ್ಷಕರ ಮನಗೆದ್ದಿರುವ ಕಾವ್ಯಶ್ರೀ ತಮ್ಮ ಪಾತ್ರದ ಕುರಿತು ಮಾತನಾಡಿದ್ದರು. “ನಾನಿಲ್ಲಿ ಪುಟ್ಟ ಗೌರಿ ಪಾತ್ರಕ್ಕೆ ಸ್ಪರ್ಧೆ ಮಾಡುತ್ತಿಲ್ಲ. ಪುಟ್ಟ ಗೌರಿ ಆಗಿ ರಂಜಿನಿ ಗಳಿಸಿರುವ ಖ್ಯಾತಿ ಪುನರಾವರ್ತಿಸಲು ಸಾಧ್ಯವಿಲ್ಲ. ನನ್ನ ಪಾತ್ರಕ್ಕೆ ನಾನು ನ್ಯಾಯ ನೀಡಬಲ್ಲೆ. ಇನ್ನು ನಿರ್ದೇಶಕರು ಎರಡು ಪಾತ್ರಗಳ ಮಧ್ಯೆ ವಿಭಿನ್ನತೆ ತಂದಿದ್ದಾರೆ” ಎಂದಿದ್ದಾರೆ.


