ಕೆAಭಾವಿ : ಹೊಲದಲ್ಲಿ ನಿರ್ಮಿಸಿದ ಕೃಷಿ ಹೊಂಡದಲ್ಲಿ ಮುಳುಗಿ ನಾಲ್ಕು ಜನ ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಸಮೀಪದ ನಗನೂರ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
ನಗನೂರ ಗ್ರಾಮದ ಸುರಪುರ ರಸ್ತೆಯ ಜಮೀನೊಂದರಲ್ಲಿ ಈ ದುರ್ಘಟನೆ ನಡೆದಿದ್ದು ಕಿರಣ (೬), ಬಸಮ್ಮ (೧೧), ಶರತ್ (೬), ಹನುಮೇಶ (೭) ಮೃತ ಮಕ್ಕಳಾಗಿದ್ದಾರೆ. ಶಾಲೆಯ ರಜೆಯ ಮಜಾ ಮಾಡಲು ಈಜಾಡಲು ತೆರಳಿದ್ದ ಒಂದೆ ಕುಟುಂಬದ ನಾಲ್ಕು ಕಂದಮ್ಮಗಳು ನೀರಿನಲ್ಲಿ ಮುಳುಗಿ ಅಸುನೀಗಿದ್ದು ಘಟನೆ ನಡೆದ ಸ್ಥಳದಲ್ಲಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆಯಿಂದ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದ್ದು ಇಡೀ ಗ್ರಾಮ ದುಃಖದಲ್ಲಿ ಮುಳುಗಿದೆ. ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಮಕ್ಕಳು ಈಜಾಡಲು ತೆರಳಿದ್ದರು ಎನ್ನಲಾಗಿದೆ. ಕೆಲವು ತಿಂಗಳ ಹಿಂದೆ ಗ್ರಾಮದ ಖಾನಾಪೂರ ಕೆರೆಯಲ್ಲಿ ಮುಳುಗಿ ಮೂರು ಜನ ಬಾಲಕರು ದುರಂತ ಸಾವಿಗೀಡಾದ ಘಟನೆ ಮಾಸುವ ಮುನ್ನವೆ ಈ ಘಟನೆ ಸಂಭವಿಸಿದು ಇದರಿಂದ ನಗನೂರ ಮತ್ತು ಖಾನಾಪೂರ ಗ್ರಾಮಸ್ಥರು ಭಯಭಿತರಾಗಿದ್ದಾರೆ. ಅಪರಾಧ ವಿಭಾಗದ ಪಿಎಸ್ಐ ಹಣಮಂತ್ರಾಯ ಮ್ಯಾಗೇರಿ ನೇತೃತ್ವದ ಪೊಲೀಸ್ ತಂಡ ಗ್ರಾಮದಲ್ಲಿ ಬಿಡಾರ ಹೂಡಿದ್ದು ಘಟನೆ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎ.ಸಿ, ಡಿವೈಎಸ್ಪಿ, ಬಿಇಒ ಭೇಟಿ-ಘಟನೆ ಸುದ್ದಿ ತಿಳಿಯುತ್ತಲೆ ಗ್ರಾಮಕ್ಕಾಗಮಿಸಿದ ಸಹಾಯಕ ಆಯುಕ್ತ ಶ್ರೀಧರ ಗೊಟೂರ, ಡಿವೈಎಸ್ಪಿ ಜಾವೇದ ಇನಾಮದಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಅವರು ಘಟನೆ ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು.

