ಕನ್ನಡದಲ್ಲಿ ನಿರ್ದೇಶನ ಮಾಡಿ ಯಶಸ್ಸು ಗಳಿಸಿ ಪರಭಾಷಾ ಚಿತ್ರರಂಗಕ್ಕೆ ಹಲವು ನಿರ್ದೇಶಕರು ಕಾಲಿಟ್ಟಿದ್ದಾರೆ. ಪ್ರಶಾಂತ್ ನೀಲ್ , ಪ್ರಶಾಂತ್ ರಾಜ್ ಮುಂತಾದ ನಿರ್ದೇಶಕರು ತೆಲುಗು , ತಮಿಳು ಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ. ಈಗ ಈ ಸಾಲಿಗೆ ಪವನ್ ಒಡೆಯರ್ ಸೇರ್ಪಡೆಯಾಗಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಗೂಗ್ಲಿ, ಗೋವಿಂದಾಯ ನಮಃ, ರಣವಿಕ್ರಮ ಮುಂತಾದ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಪವನ್ ಒಡೆಯರ್ ಈಗ ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪವನ್ ಅವರ ಹೊಸ ಚಿತ್ರ ರೆಮೋ ರಿಲೀಸ್ ಗೆ ಸಿದ್ದವಾಗಿದೆ. ಈಗ ಬಾಲಿವುಡ್ ಗೆ ಕಾಲಿಟ್ಟಿದ್ದಾರೆ.

“ನೋಟರಿ” ಎಂಬ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ ಪವನ್ ಒಡೆಯರ್. ಇದೊಂದು ಕಾಮಿಡಿ ಡ್ರಾಮಾ ಸಿನಿಮಾ ಆಗಿದ್ದು ಬೆಂಗಾಳಿಯ ಖ್ಯಾತ ನಟ ಹಾಗೂ ನಿರ್ದೇಶಕ ಪರಂಬ್ರತ್ ಚಟ್ಟೋಪಾಧ್ಯಾಯ ಈ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.

ಪರಂಬ್ರತ್ ಚಟ್ಟೋಪಾಧ್ಯಾಯ ವಿದ್ಯಾ ಬಾಲನ್, ಅನುಷ್ಕಾ ಶರ್ಮ, ರವೀನಾ ಟಂಡನ್ ಜೊತೆ ನಟಿಸಿದ್ದಾರೆ. ಕಹಾನಿ, ಪರಿ ಹಾಗೂ ಸೂಪರ್ ಹಿಟ್ ಶೋ ಅರಣ್ಯಕಾದಲ್ಲಿ ನಟಿಸಿದ್ದಾರೆ.

ಈ ಸಿನಿಮಾಗೆ ಪವನ್ ಒಡೆಯರ್ ನಿರ್ದೇಶನದ ಜೊತೆಗೆ ನಿರ್ಮಾಣವನ್ನು ಮಾಡುತ್ತಿದ್ದಾರೆ. ಬಾಲಿವುಡ್ ನ ಖ್ಯಾತ ನಿರ್ಮಾಪಕ ಶಬೀರ್ ಬಾಕ್ಸ್ ವಾಲ್ ಅವರ ಕಾಶ್ ಎಂಟರ್ಟೈನ್ಮೆಂಟ್ ಜೊತೆಗೂಡಿ ಪವನ್ ತಮ್ಮದೇ ಒಡೆಯರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನೋಟರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ

