ಕೆಂಡಸಂಪಿಗೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ನಟನಾ ಜಗತ್ತಿಗೆ ಪಾದಾರ್ಪಣೆ ಮಾಡಿದ ಮಾನ್ವಿತಾ ಕಾಮತ್ ಕನ್ನಡದ ಜೊತೆಗೆ ಪರಭಾಷೆಯ ಸಿನಿರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ರೋಮಿಯೋ ಖ್ಯಾತಿಯ ಪಿ.ಸಿ ಶೇಖರ್ ಅವರ ನಿರ್ದೇಶನದ ಸಿನಿಮಾವನ್ನು ಒಪ್ಪಿಕೊಂಡಿದ್ದು ಅದರಲ್ಲಿ ವಿಭಿನ್ನ ಪಾತ್ರದ ಮೂಲಕ ಸಿನಿಪ್ರಿಯರನ್ನು ರಂಜಿಸಲು ಮಾನ್ವಿತಾ ತಯಾರಾಗಿದ್ದಾರೆ.

ಪಿ.ಸಿ.ಶೇಖರ್ ಅವರ ಇನ್ನು ಹೆಸರಿಡಬೇಕಾದ ಸಿನಿಮಾದಲ್ಲಿ ರೈತ ಮಹಿಳೆಯಾಗಿ ಮಾನ್ವಿತಾ ಬಣ್ಣ ಹಚ್ಚಲಿದ್ದಾರೆ. ಅಂದ ಹಾಗೇ ಪ್ರೀತಿಯ ರಾಯಭಾರಿ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ನಕುಲ್ ಗೌಡ ಅವರು ಈ ಸಿನಿಮಾದಲ್ಲಿ ನಾಯಕನಾಗಿ ಮಾನ್ವಿತಾ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಚಿತ್ರವು ಲವ್ ಸ್ಟೋರಿಯ ಜೊತೆಗೆ ಥ್ರಿಲ್ಲರ್ ಕಥಾನಕವನ್ನು ಹೊಂದಿದ್ದು ಹಳ್ಳಿ ಹುಡುಗಿಯಾಗಿ ನಿಮ್ಮ ಮುಂದೆ ಮಾನ್ವಿತಾ ಕಾಮತ್ ಬರಲಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಾನ್ವಿತಾ ಕಾಮತ್ ರೇಡಿಯೋ ಜಾಕಿಯಾಗಿ ವೃತ್ತಿ ಜೀವನ ಶುರು ಮಾಡಿದ ಚೆಲುವೆ. ಕಿಲಾಡಿ ಎನ್ನುವ ಶೋ ಮೂಲಕ ರೆಡಿಯೋ ಜಗತ್ತಿನಲ್ಲಿ ಮನೆ ಮಾತಾದ ಆಕೆ ಕೆಂಡಸಂಪಿಗೆ ಸಿನಿಮಾದ ಮೂಲಕ ಹಿರಿತೆರೆಗೆ ಹಾರಿದರು. .


ಕೆಂಡಸಂಪಿಗೆಯಲ್ಲಿ ನಾಯಕಿ ಗೌರಿ ಶೆಟ್ಟಿ ಯಾಗಿ ಕಾಣಿಸಿಕೊಂಡ ಈಕೆ ಮೊದಲ ಸಿನಿಮಾದ ನಟನೆಗೆ ಸೈಮಾ ನೀಡುವ ಅತ್ಯುತ್ತಮ ನಟಿ ಸಿನಿಮಾ ಪ್ರಶಸ್ತಿ ಪಡೆದರು.
ಚೌಕ, ಕನಕ, ಟಗರು, ರಾಜಸ್ಥಾನ್ ಡೈರೀಸ್, ರೈನ್ ಬೋ, ತಾರಕಾಸುರ, ರಿಲ್ಯಾಕ್ಸ್ ಸತ್ಯ, ಇಂಡಿಯಾ ವರ್ಸಸ್ ಇಂಗ್ಲೆಂಡ್ ಸಿನಿಮಾಗಳಲ್ಲಿ ಅಭಿನಯಿಸಿರುವ ಮಾನ್ವಿತಾ ಕಾಮತ್ ಟಗರು ಸಿನಿಮಾದ ಪುಟ್ಟಿ ಪಾತ್ರ ನೀಡಿದ ಜನಪ್ರಿಯತೆ ಅಷ್ಟಿಷ್ಟಲ್ಲ. ಇಂದಿಗೂ ಟಗರು ಪುಟ್ಟಿ ಎಂದೇ ಗುರುತಿಸಲ್ಪಡುವ ಮಾನ್ವಿತಾ ಟಗರು ಸಿನಿಮಾದ ಅಭಿನಯಕ್ಕೆ ಫಿಲಂ ಫೇರ್ ನೀಡುವ ಪ್ರಶಸ್ತಿ ಪಡೆದುಕೊಂಡಿದ್ದಾರೆ.



